ಏಕಲವ್ಯ ದೇವಸ್ಥಾನ ಮಹಾಭಾರತದ ಏಕಲವ್ಯನಿಗೆ ಸಮರ್ಪಿತವಾಗಿರುವ ವಿಶ್ವದ ಏಕೈಕ ಹಿಂದೂ ದೇವಾಲಯವಾಗಿದೆ . ಇದು ಭಾರತದ ಹರಿಯಾಣದ ಗುರುಗ್ರಾಮ್‌ನ ಖಂಡ್ಸಾ ಗ್ರಾಮದಲ್ಲಿದೆ. ಏಕಲವ್ಯನು ತನ್ನ ಹೆಬ್ಬೆರಳನ್ನು ಕತ್ತರಿಸಿ ಗುರು ದ್ರೋಣರಿಗೆ ಗುರುದಕ್ಷಿಣೆಯಾಗಿ ಅರ್ಪಿಸಿದ ಸ್ಥಳದ ಮೇಲೆ ಇದನ್ನು ನಿರ್ಮಿಸಲಾಗಿದೆ. ಅದೇ ಸ್ಥಳದಲ್ಲಿ ಅವನ ಹೆಬ್ಬೆರಳನ್ನು ಸಮಾಧಿ ಮಾಡಲಾಯಿತು ಮತ್ತು ಈ ಮಹಾನ್ ವೀರನನ್ನು ಗೌರವಿಸಲು ಅದರ ಮೇಲೆ ದೇವಾಲಯವನ್ನು ನಿರ್ಮಿಸಲಾಯಿತು. == ಇತಿಹಾಸ ಮತ್ತು ಮಹತ್ವ == ಮಹಾಭಾರತದ ಪ್ರಕಾರ ಪಾಂಡವರು ಮತ್ತು ಕೌರವರು ಗುರು ದ್ರೋಣಾಚಾರ್ಯರ ಬಳಿ ತರಬೇತಿ ಪಡೆಯುತ್ತಿದ್ದರು . ದ್ರೋಣರು ಅರ್ಜುನನನ್ನು ತನ್ನ ಕಾಲದ ಶ್ರೇಷ್ಠ ಬಿಲ್ಲುಗಾರನನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ಆದಾಗ್ಯೂ, ಒಂದು ದಿನ, ಅರ್ಜುನನು ಬಿಲ್ಲುಗಾರಿಕೆಯಲ್ಲಿ ತನಗಿಂತ ಉತ್ತಮನಾದ ಏಕಲವ್ಯ ಎಂಬ ಹುಡುಗನನ್ನು ಕಂಡುಹಿಡಿದನು. ಅವನು ಏಕಲವ್ಯನ ಕುರಿತು ದ್ರೋಣರಿಗೆ ಹೇಳಿದನು . ತನ್ನ ವಾಗ್ದಾನವನ್ನು ನೆನಪಿಸಿಕೊಂಡ ದ್ರೋಣರು ಏಕಲವ್ಯನಿಗೆ ಗುರುದಕ್ಷಿಣೆಯಾಗಿ (ಗುರುವಿಗೆ ಉಡುಗೊರೆ) ತನ್ನ ಬಲಗೈ ಹೆಬ್ಬೆರಳನ್ನು (ಬಿಲ್ಲುಗಾರಿಕೆಗೆ ಅಗತ್ಯವಾದ ದೇಹದ ಒಂದು ಭಾಗ) ಕತ್ತರಿಸಿ ಕೊಡಲು ಹೇಳಿದರು . ಏಕಲವ್ಯನು ವಿಧೇಯನಾಗಿ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿದನು. ಆ ಸ್ಥಳದಲ್ಲಿ ಏಕಲವ್ಯನ ಹೆಬ್ಬೆರಳನ್ನು ಹೂಳಲಾಗಿತ್ತು ಎಂದು ಹೇಳಲಾಗುತ್ತದೆ. ಏಕಲವ್ಯನ ತ್ಯಾಗವನ್ನು ಗೌರವಿಸಲು, ೧೭೨೧ ರಲ್ಲಿ, ಶ್ರೀಮಂತ ಗ್ರಾಮಸ್ಥರು ಆ ಸ್ಥಳದಲ್ಲಿ ಸಣ್ಣ ಏಕಲವ್ಯ ದೇವಾಲಯವನ್ನು ನಿರ್ಮಿಸಿದರು. ಈಗ ಇದನ್ನು ಗುರುಗ್ರಾಮ್ ಸಾಂಸ್ಕೃತಿಕ ಗೌರವ ಸಮಿತಿ ನಿರ್ವಹಿಸುತ್ತಿದೆ. ಇಂದು ಸ್ಥಳೀಯ ಗ್ರಾಮಸ್ಥರು ಮಾತ್ರ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಪ್ರವಾಸಿಗರು ಮತ್ತು ವಿದೇಶಿಯರಲ್ಲಿ ಇದು ಹೆಚ್ಚು ಜನಪ್ರಿಯವಾಗಿಲ್ಲ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಭಾರತದ ಇತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಭಿಲ್ ಜನರು ಈ ದೇವಾಲಯವನ್ನು ಹೆಚ್ಚು ಪೂಜಿಸುತ್ತಾರೆ. ಈ ದೇವಾಲಯವು ಗುರುಗ್ರಾಮ್‌ನಲ್ಲಿರುವ ಮಹಾಭಾರತಕ್ಕೆ ಸಂಬಂಧಿಸಿದ ಇತರ ಪ್ರಮುಖ ಸ್ಥಳಗಳ ಸಮೀಪದಲ್ಲಿದೆ, ಉದಾಹರಣೆಗೆ ಗುರುಗ್ರಾಮ್ ಭೀಮಾ ಕುಂಡ್ ( ದ್ರೋಣರು ಸ್ನಾನ ಮಾಡಿದ ಸ್ಥಳ), ದ್ರೋಣಾಚಾರ್ಯರಿಗೆ ಸಮರ್ಪಿತವಾದ ದೇವಾಲಯ ಮತ್ತು ಪಾಂಡವರು ನಿರ್ಮಿಸಿದ ಶಿವನ ದೇವಾಲಯ. == ರಚನೆ == ದೇವಾಲಯವು ಒಂದೇ ಕೋಣೆಯನ್ನು ಹೊಂದಿದ್ದು, ಒಂದೇ ಸಮಯದಲ್ಲಿ ಒಂದೆರಡು ಜನರು ಕುಳಿತುಕೊಳ್ಳಬಹುದು. ಅದರೊಂದಿಗೆ ಗ್ರಾಮ ಪಂಚಾಯತ್, ದೇವಸ್ಥಾನಕ್ಕೆ ಭೇಟಿ ನೀಡುವ ಎಲ್ಲಾ ಯಾತ್ರಿಕರಿಗೆ ಅವಕಾಶ ಕಲ್ಪಿಸಲು ಎರಡು ಕೋಣೆಗಳ ಏಕಲವ್ಯ ಧರ್ಮಶಾಲಾವನ್ನು ಕೂಡ ನಿರ್ಮಿಸಿದೆ. == ಪ್ರವಾಸೋದ್ಯಮಕ್ಕಾಗಿ ಇತ್ತೀಚಿನ ಪ್ರಯತ್ನಗಳು == ಗುರಗಾಂವ್ ಅನ್ನು ಗುರುಗ್ರಾಮ್ ಎಂದು ಮರುನಾಮಕರಣ ಮಾಡಿದಾಗ ಗ್ರಾಮಸ್ಥರು ಮತ್ತು ಗುರುಗ್ರಾಮ್ ಸಾಂಸ್ಕೃತಿಕ ಗೌರವ ಸಮಿತಿಯ ಸದಸ್ಯರು ತುಂಬಾ ಸಂತೋಷಪಟ್ಟರು. ಹೆಚ್ಚಿನ ಪ್ರವಾಸಿಗರು ಸ್ಥಳಕ್ಕೆ ಆಗಮಿಸುತ್ತಾರೆ ಎಂದು ಅವರು ನಿರೀಕ್ಷಿಸಿದ್ದರು. ಅವರು ಪ್ರತಿ ವರ್ಷ ಜನವರಿ ೧೪ ರಂದು ವಿಶೇಷ ಪೂಜೆಯನ್ನು ಆರಂಭಿಸಿದರು. ಏಕಲವ್ಯನು ನಿಷಾದ ಜಾತಿಗೆ ಸೇರಿದವನು. ಆ ಜಾತಿಯ ಜನರಿಂದಲೇ ಪೂಜೆ ನಡೆಯುತಿತ್ತು. ಅದರೊಂದಿಗೆ ಅವರು ದೇವಾಲಯ ಮತ್ತು ದೇವಾಲಯದ ಆವರಣವನ್ನು ವಿಸ್ತರಿಸಲು ಬಯಸಿದ್ದರು. ಏಕಲವ್ಯ ದೇವಸ್ಥಾನ, ದ್ರೋಣಾಚಾರ್ಯ ದೇವಸ್ಥಾನ ಮತ್ತು ಇತರ ಸ್ಥಳಗಳನ್ನು ಒಳಗೊಂಡಿರುವ ಸ್ಥಳೀಯ ಪ್ರವಾಸೋದ್ಯಮ ಸರ್ಕ್ಯೂಟ್ ಅನ್ನು ಅಭಿವೃದ್ಧಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. == ಬಾಹ್ಯ ಕೊಂಡಿಗಳು == ವಿಶ್ವದ ಏಕೈಕ ಏಕಲವ್ಯ ದೇವಾಲಯದ ನಕ್ಷೆ == ಉಲ್ಲೇಖಗಳು ==